ಕರೋನದಿಂದ ಕಲಿಯುವುದೇನು?
ಕರೋನಾದಿಂದ ಕಲಿಯುವುದೇನು?
ಡಾ. ಹೆಚ್ಚೆನ್ ಮಂಜುರಾಜ್, ಕನ್ನಡ ಸಹಪ್ರಾಧ್ಯಾಪಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ ಆರ್ ಸಾಗರ
ಡಾ. ಹೆಚ್ಚೆನ್ ಮಂಜುರಾಜ್, ಕನ್ನಡ ಸಹಪ್ರಾಧ್ಯಾಪಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ ಆರ್ ಸಾಗರ
ಲೋಕವನು ಕಲ್ಲವಿಲಗೊಳಿಸುತಿರುವ ಕರೋನಾ ಕುರಿತು ಮಾತಾಡುವುದೇನಿಲ್ಲ; ದಿಗ್ಭ್ರಮೆಯಾದಾಗ ಯಾರಾದರೂ ಮಾತಾಡಲು ಸಾಧ್ಯವೆ? ಲೋಕದ ಜನರನು ಕೇವಲ ಮೂರು ವಿಧಗಳಲ್ಲಿ ವಿಂಗಡಿಸುವಂತಾಗಿದೆ: ಸೋಂಕಿತರು, ಶಂಕಿತರು ಮತ್ತು ಆತಂಕಿತರು! ಎಂಥ ವಿಪರ್ಯಾಸವಲ್ಲವೆ?
ಕೇವಲ ಕಣ್ಣೀರು, ಆತಂಕ, ಭಯ, ನೋವು, ಸಾವು, ಚಡಪಡಿಕೆ, ಬದುಕಲು ಹೆಣಗುವಿಕೆ, ಸದ್ದಿಲ್ಲದ ಕರಾಳ ಕ್ರೌರ್ಯ, ಯಾರ ಮೇಲೋ ಸಿಟ್ಟು ಮತ್ತು ದ್ವೇಷ, ಯಾರಿಂದಲೋ ನಿರೀಕ್ಷೆ ಜೊತೆಗೆ ನಿರಾಶೆ, ಮದ್ದು ಸಿಗಬಹುದೆಂಬ ಆಶಾಭಾವ, ಆರ್ಥಿಕ ನಷ್ಟ, ಆದಾಯ ಕುಸಿತ, ಪ್ರಗತಿಗೆ ಹೊಡೆತ, ಮುಂಜಾಗರೂಕತಾ ಕ್ರಮ, ಸುದ್ದಿ ಮಾಧ್ಯಮಗಳ ಅವಲಂಬನೆ, ಇದ್ದಕ್ಕಿದ್ದಂತೆ ನಮ್ಮವರೆಲ್ಲ ಪರಕೀಯರಾದ ಪಾಪಪ್ರಜ್ಞೆ, ಅಗಾಧ ಪುರುಸೊತ್ತು, ನೆಗಡಿ-ಕೆಮ್ಮಿಗೆ ಸಾವಿನ ಅಧೀರತೆ, ಭಯಾನಕ ಚಿಂತೆ, ನಾವು ಸತ್ತುಹೋಗಬೇಕಲ್ಲಾ ಎಂಬ ದುಃಖ, ಸಾಯದೇ ಬದುಕುವುದು ಹೇಗೆ? ಎಂಬ ಪರಿ ಪರಿ ಪಡಿಪಾಟಲು ಒಟ್ಟಿನಲ್ಲಿ ಕರೋನಾ ನಮ್ಮನ್ನು ಆಧುನಿಕತೆಯ ನಾಗಾಲೋಟದ ಅವಸರ ಜಗತ್ತಿನಲ್ಲಿ ಹಿಂದೆ ತಿರುಗಿ ನೋಡುವಂತೆ ಮಾಡಿದ್ದು ಸತ್ಯಸ್ಯ ಸತ್ಯ.
ನಾನಿಲ್ಲಿ ಅದರ ರೂಪ-ಸ್ವರೂಪ, ಚಿಕಿತ್ಸೆ, ಹುಟ್ಟು-ಬೆಳವು, ಹೀಗೆ-ಹಾಗೆ ಎಂದು ಹೇಳಲು ಇದನ್ನು ಬರೆಯುತ್ತಿಲ್ಲ. ನಾನು ವೈದ್ಯನೂ ಅಲ್ಲ; ರೋಗಿಯೂ ಅಲ್ಲ! ಇದೊಂದರಿಂದ ನಾವು ಕಲಿತ ಮತ್ತು ಕಲಿಯಬೇಕಾದ ಪಾಠಗಳೇನು? ಎಂದು ಮನದಲ್ಲಿ ಮಗುಮ್ಮಾಗಿ ಮಗುವಿನಂತೆ ನನ್ನನೇ ನಾನು ಕೇಳಿಕೊಳ್ಳುತ್ತಿರುವೆ.
ದೇವರ ಶಾಪವೆಂದರೆ ಇದೇ ಇರಬೇಕು, ನಿಸರ್ಗದಿಂದ ದೂರ ಸರಿದಿದ್ದರ ಪ್ರತಿಫಲ ಇದಾಗಿರಬೇಕು, ಖ್ಯಾತ ಗೀತ ರಚನೆಕಾರರಾದ ಶ್ರೀ ಯೋಗರಾಜಭಟ್ಟರು ಹೇಳಿದರೆನ್ನಲಾದ ಮಾತೊಂದು ನನ್ನನ್ನು ಕಾಡುತ್ತಿದೆ: “ಅಕಸ್ಮಾತ್ ನರಮನುಷ್ಯರೆಲ್ಲ ಭೂಲೋಕಕ್ಕೆ ವೈರಸ್ಗಳಾಗಿದ್ದು, ಈ ಕರೋನಾ ಮನುಷ್ಯರನ್ನು ತೆಗೆಯಲು ಪ್ರಕೃತಿ ಸಿಡಿಸಿರುವ ‘ಔಷಧ’ವಾಗಿದ್ದರೆ ಏನು ಮಾಡುವುದು?” ವೈರಸ್ಸನ್ನು ವೈರಿಯೆಂದುಕೊಂಡಿರುವ ನಾವೇ ಭೂಮಿಗೆ ವೈರಸ್ಗಳಾಗಿದ್ದೇವೆ ಎಂದು ಕೊಂಡರೆ ಹೊರ ಬರುವ ಸತ್ಯ ಏನಿದೆ? ಅದನ್ನು ಕುರಿತು ಮನುಕುಲ ಆಲೋಚಿಸಬೇಕಿದೆ.
ನಮ್ಮ ಜೀವನ ಹಳಿ ತಪ್ಪಿದ್ದರಿಂದಲೇ ಅಲ್ಲವೆ? ಇಂಥ ಅನಾಹುತ ಆಗುತ್ತಿರುವುದು. ‘ಇದರಲ್ಲಿ ನನ್ನ ಪಾತ್ರವಿಲ್ಲ, ನಾನು ಸರಳ-ವಿರಳ’ ಎಂದು ಏನೇ ಬೊಬ್ಬೆ ಹೊಡೆದುಕೊಂಡರೂ ಯಾರು ಕೇಳುತ್ತಾರೆ? ನಿಸರ್ಗಕ್ಕೆ ಎಲ್ಲರೂ ಒಂದೇ! ಈ ಅಖಂಡ ವಿಶ್ವದಲ್ಲಿ ಎಲ್ಲವೂ ಪರಸ್ಪರ ಮತ್ತು ವೃತ್ತದೊಳಗೆ ಬರುವ ಸಹ ಸಂಬಂಧಿಕರು!! ಒಂದೇ ಸರಪಳಿಯಲ್ಲಿ ಬಂಧಿತವಾಗಿರುವ ಕೊಂಡಿಗಳು ನಾವು. ಯಾರೋ ತಪ್ಪು ಮಾಡಿದರೆ ಮತ್ತಾರೋ ಶಿಕ್ಷೆ ಅನುಭವಿಸಲೇಬೇಕು, ಇದು ನಿಸರ್ಗ ನಿಯಮ.
ಇದು ಆಹಾರದಿಂದ ಒದಗಿ ಬಂದ ಅನಾಹುತವೋ? ಜೈವಿಕ ಅಸ್ತ್ರವೋ? ದೇಶಗಳ ಚಿತಾವಣೆಯೋ? ಭೂಮಿಯ ಅಂತ್ಯಕಾಲವೋ? ಆಗಿನಿಂದಲೂ ಪ್ರಳಯವೆಂದು ಬಡಬಡಿಸಿದವರ ಭವಿಷ್ಯವಾಣಿಯ ನಿಜರೂಪವೋ? ದೈವ ನಿಯಾಮಕವೋ? ವಿಧಿ ಲಿಖಿತವೋ? ಏನೇ ಹೆಸರು ಕೊಟ್ಟು ಚರ್ಚಿಸುತ್ತಾ, ಯಾರನ್ನೋ ದೂಷಿಸುತ್ತಾ ನಮ್ಮ ಅಸಹನೆ-ಅಸಮಾಧಾನ-ಸಿಟ್ಟುಗಳನ್ನು ಹೊರ ಹಾಕಬಹುದು. ಇದನ್ನೇ ಅಲ್ಲವೇ ನಾವೀಗ ಮಾಡುತ್ತಿರುವುದು!? ನನ್ನ ಪ್ರಶ್ನೆಯೇನೆಂದರೆ ನಾವು ಇನ್ನಾದರೂ ಬದಲಾಗುತ್ತೇವೆಯೇ? ‘ನಾಯಿಯ ಬಾಲ ಡೊಂಕು ಅಲ್ಲವೇ?’ ಎಂದುಕೊಂಡು ‘ನಾನು ಸರಿಯಿದ್ದೇನೆ; ಉಳಿದವರು ಸರಿಯಿಲ್ಲ’ ಎಂಬ ನಕಾರಾತ್ಮಕ ಧೋರಣೆಯನ್ನೇ ಮುಂದುವರಿಸುತ್ತೇವೆಯೇ?
ಸಮ ಸಮಾಜ ನಿರ್ಮಾಣದ ಕನಸನ್ನು ಸಾಕಾರ ಮಾಡಿಕೊಳ್ಳಲು ನಾವು ಹೆಣಗಾಡುತ್ತಿರುವಾಗ ಈ ‘ಕರೋನ’ ಮಾಡಿದ್ದೇನು: ಮನುಷ್ಯರನ್ನು ಮುಟ್ಟದೇ ಇರಬೇಕಾದ, ದೂರವೇ ಉಳಿಯಬೇಕಾದ ಘನಘೋರ ದುಃಸ್ಥಿತಿ!
ಅಸ್ಪೃಶ್ಯತೆಯನ್ನು ನಿರ್ಮೂಲನ ಮಾಡಲು ಶಾಸನ-ಕಾನೂನುಗಳನ್ನು ರೂಪಿಸಿಕೊಂಡು ಹೋರಾಡುತ್ತಾ, ಮನಃ ಪರಿವರ್ತನೆಯನ್ನು ಮಾಡುತ್ತಾ ‘ನಾವೆಲ್ಲರೂ ಒಂದೆ: ಜಾತಿ ಒಂದೆ, ಕುಲ ಒಂದೆ, ನಾವು ಮನುಜರು’ ಎಂದು ಹಾಡುತ್ತಾ ಪ್ರಜಾಪ್ರಭುತ್ವದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಎತ್ತಿ ಹಿಡಿಯುತ್ತಾ ಬದುಕುತ್ತಿದ್ದ ನಮಗೆ ಈ ಕರೋನಾ ಮಹಾಮಾರಿ ಕೊಟ್ಟ ‘ಏಟನ್ನು’ ಕುರಿತು ಆಲೋಚಿಸಬೇಕಿದೆ.
ಮತಧರ್ಮಗಳನ್ನು ಗುತ್ತಿಗೆ ತೆಗೆದುಕೊಂಡವರಂತೆ ಮಾತಾಡುವವರು ಜನರಲ್ಲಿ ಆತ್ಮವಿಶ್ವಾಸವನ್ನು ತುಂಬದೇ ಭಯವನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಮಂದಿ ಹೀಗೆ ಸಾವನ್ನಪ್ಪುತ್ತಿದ್ದರೆ ಏನು ಮಾಡಬೇಕೆಂದು ತಿಳಿಯದೇ ಒದ್ದಾಡುತ್ತಿದ್ದೇವೆ. ಸರ್ಕಾರ, ವೈದ್ಯಕೀಯ ಜಗತ್ತು ಮತ್ತು ಆರಕ್ಷಕ ವಲಯಗಳು ನಮ್ಮನ್ನು ಎಚ್ಚರಿಸುತ್ತಾ ಅಭೂತಪೂರ್ವ ಸೇವೆ ನೀಡುತ್ತಿವೆ. ಇಷ್ಟಾದರೂ ‘ಈ ಭುವಿಯ ಕೇಂದ್ರ ಮನುಷ್ಯನಲ್ಲ’ ಎಂಬುದನ್ನು ಕರೋನ ಸ್ಪಷ್ಟಪಡಿಸಿದೆ. ‘ಕಣ್ಣಿಗೆ ಕಾಣದ ನಾಟಕಕಾರ; ನಿನಗೇ ನನ್ನ ನಮಸ್ಕಾರ’ ಎಂಬ ಹಾಡನ್ನು ಗುನುಗಬೇಕಿದೆ. ಸೂಕ್ಷ್ಮ ವೈರಾಣುವೊಂದು ಹೀಗೆ ಸ್ಥೂಲ ಜಗತ್ತನ್ನು ಆಪೋಶನ ತೆಗೆದುಕೊಳ್ಳುತ್ತದೆಂದು ಯಾರು ತಾನೇ ಊಹಿಸಿದ್ದರು?
ಖಂಡಿತ ಒಳ್ಳೆಯ ಕಾಲ ಬರುತ್ತದೆ, ವೈದ್ಯಕೀಯ ವಿಜ್ಞಾನವು ಈ ಸವಾಲನ್ನು ಎದುರಿಸಿ, ಸೂಕ್ತ ಮದ್ದು ಮತ್ತು ಚಿಕಿತ್ಸಾ ವಿಧಾನಗಳನ್ನು ರೂಪಿಸಿ ಕೊಡುತ್ತದೆ, ಆದರೆ ಅದಕ್ಕೆ ಸಮಯ ಬೇಕಾಗಿದೆ; ಅಲ್ಲಿಯವರೆಗೂ ಈ ಮಾರಣಹೋಮ. ಮುಂದೊಂದು ದಿನದಲ್ಲಿ ಕರೋನವನ್ನು ನಮ್ಮ ರೋಗ ನಿರೋಧಕ ಶಕ್ತಿ ಅರಗಿಸಿಕೊಳ್ಳಬಹುದು; ಇತರ ವೈರಾಣುಗಳಂತೆ ಚಿಕಿತ್ಸೆಗೆ ಬಗ್ಗಬಹುದು. ಇದನ್ನೆಲ್ಲ ನಾವು ಜಗತ್ತಿನ ಇತಿಹಾಸದಿಂದ ತಿಳಿಯಬಹುದಾಗಿದೆ. ಆದರೆ ಇಂಥ ಡೆಡ್ಲಿ ವೈರಾಣು ಲೋಕದ ಸಮಸ್ತವನ್ನೂ ಅಲ್ಲಾಡಿಸುತಿರುವ ಪರಿ ಮಾತ್ರ ಭೀಕರ! ನಮ್ಮ ಪುರಾಣದಲ್ಲಿ ಬರುವ ರಕ್ತ ಬೀಜಾಸುರನ ಕತೆಯಂತೆಯೇ!!
ಆದರೆ ನಮ್ಮ ಅಲೋಚನಾ ಕ್ರಮ ಮತ್ತು ಜೀವನಶೈಲಿಗಳು ಬದಲಾಗದೇ ಇದ್ದರೆ ‘ಇಂಥ ಅಪಾಯ’ ಮುಂದೊಂದು ದಿನ ಖಂಡಿತ ಮನುಕುಲ ಮಾತ್ರವಲ್ಲ ಸಕಲ ಜೀವಿಗಳನೂ ಆಪೋಶನ ತೆಗೆದುಕೊಳ್ಳುವ ‘ಸದ್ದಿಲ್ಲದ ಪ್ರಳಯ’ವಾಗುವುದರಲ್ಲಿ ಸಂಶಯ ಕಾಣುತ್ತಿಲ್ಲ. ಪ್ರಕೃತಿಯು ಆಗಾಗ ಎಚ್ಚರಿಕೆಯ ಗಂಟೆಯನು ಬಾರಿಸುತ್ತಲೇ ಇರುತ್ತದೆ; ನಾವು ಮಾತ್ರ ಎಂದಿನಂತೆ ಕೇಳಿಸಿದರೂ ಕೇಳಿಸದ ಹಾಗೆ ಜಾಣಗಿವುಡರಾಗಿ ಬದುಕುತ್ತಲೇ ಇರುತ್ತೇವೆ. ಏನಾದರಿರಲಿ: ಪಾಠ ಕಲಿಯೋಣ ಮತ್ತು ‘ಅರಿ’ಯನ್ನು ಅರಿತು ಬಾಳೋಣ. ಲೋಕಾ ಸಮಸ್ತಾ ಸುಖಿನೋಭವಂತು.
-ಡಾ. ಹೆಚ್ ಎನ್ ಮಂಜುರಾಜ್, ಮೈಸೂರು, ವಿಚಾರಪ್ರಜ್ಞೆ ಪಾಕ್ಷಿಕ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ
ಕೇವಲ ಕಣ್ಣೀರು, ಆತಂಕ, ಭಯ, ನೋವು, ಸಾವು, ಚಡಪಡಿಕೆ, ಬದುಕಲು ಹೆಣಗುವಿಕೆ, ಸದ್ದಿಲ್ಲದ ಕರಾಳ ಕ್ರೌರ್ಯ, ಯಾರ ಮೇಲೋ ಸಿಟ್ಟು ಮತ್ತು ದ್ವೇಷ, ಯಾರಿಂದಲೋ ನಿರೀಕ್ಷೆ ಜೊತೆಗೆ ನಿರಾಶೆ, ಮದ್ದು ಸಿಗಬಹುದೆಂಬ ಆಶಾಭಾವ, ಆರ್ಥಿಕ ನಷ್ಟ, ಆದಾಯ ಕುಸಿತ, ಪ್ರಗತಿಗೆ ಹೊಡೆತ, ಮುಂಜಾಗರೂಕತಾ ಕ್ರಮ, ಸುದ್ದಿ ಮಾಧ್ಯಮಗಳ ಅವಲಂಬನೆ, ಇದ್ದಕ್ಕಿದ್ದಂತೆ ನಮ್ಮವರೆಲ್ಲ ಪರಕೀಯರಾದ ಪಾಪಪ್ರಜ್ಞೆ, ಅಗಾಧ ಪುರುಸೊತ್ತು, ನೆಗಡಿ-ಕೆಮ್ಮಿಗೆ ಸಾವಿನ ಅಧೀರತೆ, ಭಯಾನಕ ಚಿಂತೆ, ನಾವು ಸತ್ತುಹೋಗಬೇಕಲ್ಲಾ ಎಂಬ ದುಃಖ, ಸಾಯದೇ ಬದುಕುವುದು ಹೇಗೆ? ಎಂಬ ಪರಿ ಪರಿ ಪಡಿಪಾಟಲು ಒಟ್ಟಿನಲ್ಲಿ ಕರೋನಾ ನಮ್ಮನ್ನು ಆಧುನಿಕತೆಯ ನಾಗಾಲೋಟದ ಅವಸರ ಜಗತ್ತಿನಲ್ಲಿ ಹಿಂದೆ ತಿರುಗಿ ನೋಡುವಂತೆ ಮಾಡಿದ್ದು ಸತ್ಯಸ್ಯ ಸತ್ಯ.
ನಾನಿಲ್ಲಿ ಅದರ ರೂಪ-ಸ್ವರೂಪ, ಚಿಕಿತ್ಸೆ, ಹುಟ್ಟು-ಬೆಳವು, ಹೀಗೆ-ಹಾಗೆ ಎಂದು ಹೇಳಲು ಇದನ್ನು ಬರೆಯುತ್ತಿಲ್ಲ. ನಾನು ವೈದ್ಯನೂ ಅಲ್ಲ; ರೋಗಿಯೂ ಅಲ್ಲ! ಇದೊಂದರಿಂದ ನಾವು ಕಲಿತ ಮತ್ತು ಕಲಿಯಬೇಕಾದ ಪಾಠಗಳೇನು? ಎಂದು ಮನದಲ್ಲಿ ಮಗುಮ್ಮಾಗಿ ಮಗುವಿನಂತೆ ನನ್ನನೇ ನಾನು ಕೇಳಿಕೊಳ್ಳುತ್ತಿರುವೆ.
ದೇವರ ಶಾಪವೆಂದರೆ ಇದೇ ಇರಬೇಕು, ನಿಸರ್ಗದಿಂದ ದೂರ ಸರಿದಿದ್ದರ ಪ್ರತಿಫಲ ಇದಾಗಿರಬೇಕು, ಖ್ಯಾತ ಗೀತ ರಚನೆಕಾರರಾದ ಶ್ರೀ ಯೋಗರಾಜಭಟ್ಟರು ಹೇಳಿದರೆನ್ನಲಾದ ಮಾತೊಂದು ನನ್ನನ್ನು ಕಾಡುತ್ತಿದೆ: “ಅಕಸ್ಮಾತ್ ನರಮನುಷ್ಯರೆಲ್ಲ ಭೂಲೋಕಕ್ಕೆ ವೈರಸ್ಗಳಾಗಿದ್ದು, ಈ ಕರೋನಾ ಮನುಷ್ಯರನ್ನು ತೆಗೆಯಲು ಪ್ರಕೃತಿ ಸಿಡಿಸಿರುವ ‘ಔಷಧ’ವಾಗಿದ್ದರೆ ಏನು ಮಾಡುವುದು?” ವೈರಸ್ಸನ್ನು ವೈರಿಯೆಂದುಕೊಂಡಿರುವ ನಾವೇ ಭೂಮಿಗೆ ವೈರಸ್ಗಳಾಗಿದ್ದೇವೆ ಎಂದು ಕೊಂಡರೆ ಹೊರ ಬರುವ ಸತ್ಯ ಏನಿದೆ? ಅದನ್ನು ಕುರಿತು ಮನುಕುಲ ಆಲೋಚಿಸಬೇಕಿದೆ.
ನಮ್ಮ ಜೀವನ ಹಳಿ ತಪ್ಪಿದ್ದರಿಂದಲೇ ಅಲ್ಲವೆ? ಇಂಥ ಅನಾಹುತ ಆಗುತ್ತಿರುವುದು. ‘ಇದರಲ್ಲಿ ನನ್ನ ಪಾತ್ರವಿಲ್ಲ, ನಾನು ಸರಳ-ವಿರಳ’ ಎಂದು ಏನೇ ಬೊಬ್ಬೆ ಹೊಡೆದುಕೊಂಡರೂ ಯಾರು ಕೇಳುತ್ತಾರೆ? ನಿಸರ್ಗಕ್ಕೆ ಎಲ್ಲರೂ ಒಂದೇ! ಈ ಅಖಂಡ ವಿಶ್ವದಲ್ಲಿ ಎಲ್ಲವೂ ಪರಸ್ಪರ ಮತ್ತು ವೃತ್ತದೊಳಗೆ ಬರುವ ಸಹ ಸಂಬಂಧಿಕರು!! ಒಂದೇ ಸರಪಳಿಯಲ್ಲಿ ಬಂಧಿತವಾಗಿರುವ ಕೊಂಡಿಗಳು ನಾವು. ಯಾರೋ ತಪ್ಪು ಮಾಡಿದರೆ ಮತ್ತಾರೋ ಶಿಕ್ಷೆ ಅನುಭವಿಸಲೇಬೇಕು, ಇದು ನಿಸರ್ಗ ನಿಯಮ.
ಇದು ಆಹಾರದಿಂದ ಒದಗಿ ಬಂದ ಅನಾಹುತವೋ? ಜೈವಿಕ ಅಸ್ತ್ರವೋ? ದೇಶಗಳ ಚಿತಾವಣೆಯೋ? ಭೂಮಿಯ ಅಂತ್ಯಕಾಲವೋ? ಆಗಿನಿಂದಲೂ ಪ್ರಳಯವೆಂದು ಬಡಬಡಿಸಿದವರ ಭವಿಷ್ಯವಾಣಿಯ ನಿಜರೂಪವೋ? ದೈವ ನಿಯಾಮಕವೋ? ವಿಧಿ ಲಿಖಿತವೋ? ಏನೇ ಹೆಸರು ಕೊಟ್ಟು ಚರ್ಚಿಸುತ್ತಾ, ಯಾರನ್ನೋ ದೂಷಿಸುತ್ತಾ ನಮ್ಮ ಅಸಹನೆ-ಅಸಮಾಧಾನ-ಸಿಟ್ಟುಗಳನ್ನು ಹೊರ ಹಾಕಬಹುದು. ಇದನ್ನೇ ಅಲ್ಲವೇ ನಾವೀಗ ಮಾಡುತ್ತಿರುವುದು!? ನನ್ನ ಪ್ರಶ್ನೆಯೇನೆಂದರೆ ನಾವು ಇನ್ನಾದರೂ ಬದಲಾಗುತ್ತೇವೆಯೇ? ‘ನಾಯಿಯ ಬಾಲ ಡೊಂಕು ಅಲ್ಲವೇ?’ ಎಂದುಕೊಂಡು ‘ನಾನು ಸರಿಯಿದ್ದೇನೆ; ಉಳಿದವರು ಸರಿಯಿಲ್ಲ’ ಎಂಬ ನಕಾರಾತ್ಮಕ ಧೋರಣೆಯನ್ನೇ ಮುಂದುವರಿಸುತ್ತೇವೆಯೇ?
ಸಮ ಸಮಾಜ ನಿರ್ಮಾಣದ ಕನಸನ್ನು ಸಾಕಾರ ಮಾಡಿಕೊಳ್ಳಲು ನಾವು ಹೆಣಗಾಡುತ್ತಿರುವಾಗ ಈ ‘ಕರೋನ’ ಮಾಡಿದ್ದೇನು: ಮನುಷ್ಯರನ್ನು ಮುಟ್ಟದೇ ಇರಬೇಕಾದ, ದೂರವೇ ಉಳಿಯಬೇಕಾದ ಘನಘೋರ ದುಃಸ್ಥಿತಿ!
ಅಸ್ಪೃಶ್ಯತೆಯನ್ನು ನಿರ್ಮೂಲನ ಮಾಡಲು ಶಾಸನ-ಕಾನೂನುಗಳನ್ನು ರೂಪಿಸಿಕೊಂಡು ಹೋರಾಡುತ್ತಾ, ಮನಃ ಪರಿವರ್ತನೆಯನ್ನು ಮಾಡುತ್ತಾ ‘ನಾವೆಲ್ಲರೂ ಒಂದೆ: ಜಾತಿ ಒಂದೆ, ಕುಲ ಒಂದೆ, ನಾವು ಮನುಜರು’ ಎಂದು ಹಾಡುತ್ತಾ ಪ್ರಜಾಪ್ರಭುತ್ವದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳನ್ನು ಎತ್ತಿ ಹಿಡಿಯುತ್ತಾ ಬದುಕುತ್ತಿದ್ದ ನಮಗೆ ಈ ಕರೋನಾ ಮಹಾಮಾರಿ ಕೊಟ್ಟ ‘ಏಟನ್ನು’ ಕುರಿತು ಆಲೋಚಿಸಬೇಕಿದೆ.
ಮತಧರ್ಮಗಳನ್ನು ಗುತ್ತಿಗೆ ತೆಗೆದುಕೊಂಡವರಂತೆ ಮಾತಾಡುವವರು ಜನರಲ್ಲಿ ಆತ್ಮವಿಶ್ವಾಸವನ್ನು ತುಂಬದೇ ಭಯವನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಮಂದಿ ಹೀಗೆ ಸಾವನ್ನಪ್ಪುತ್ತಿದ್ದರೆ ಏನು ಮಾಡಬೇಕೆಂದು ತಿಳಿಯದೇ ಒದ್ದಾಡುತ್ತಿದ್ದೇವೆ. ಸರ್ಕಾರ, ವೈದ್ಯಕೀಯ ಜಗತ್ತು ಮತ್ತು ಆರಕ್ಷಕ ವಲಯಗಳು ನಮ್ಮನ್ನು ಎಚ್ಚರಿಸುತ್ತಾ ಅಭೂತಪೂರ್ವ ಸೇವೆ ನೀಡುತ್ತಿವೆ. ಇಷ್ಟಾದರೂ ‘ಈ ಭುವಿಯ ಕೇಂದ್ರ ಮನುಷ್ಯನಲ್ಲ’ ಎಂಬುದನ್ನು ಕರೋನ ಸ್ಪಷ್ಟಪಡಿಸಿದೆ. ‘ಕಣ್ಣಿಗೆ ಕಾಣದ ನಾಟಕಕಾರ; ನಿನಗೇ ನನ್ನ ನಮಸ್ಕಾರ’ ಎಂಬ ಹಾಡನ್ನು ಗುನುಗಬೇಕಿದೆ. ಸೂಕ್ಷ್ಮ ವೈರಾಣುವೊಂದು ಹೀಗೆ ಸ್ಥೂಲ ಜಗತ್ತನ್ನು ಆಪೋಶನ ತೆಗೆದುಕೊಳ್ಳುತ್ತದೆಂದು ಯಾರು ತಾನೇ ಊಹಿಸಿದ್ದರು?
ಖಂಡಿತ ಒಳ್ಳೆಯ ಕಾಲ ಬರುತ್ತದೆ, ವೈದ್ಯಕೀಯ ವಿಜ್ಞಾನವು ಈ ಸವಾಲನ್ನು ಎದುರಿಸಿ, ಸೂಕ್ತ ಮದ್ದು ಮತ್ತು ಚಿಕಿತ್ಸಾ ವಿಧಾನಗಳನ್ನು ರೂಪಿಸಿ ಕೊಡುತ್ತದೆ, ಆದರೆ ಅದಕ್ಕೆ ಸಮಯ ಬೇಕಾಗಿದೆ; ಅಲ್ಲಿಯವರೆಗೂ ಈ ಮಾರಣಹೋಮ. ಮುಂದೊಂದು ದಿನದಲ್ಲಿ ಕರೋನವನ್ನು ನಮ್ಮ ರೋಗ ನಿರೋಧಕ ಶಕ್ತಿ ಅರಗಿಸಿಕೊಳ್ಳಬಹುದು; ಇತರ ವೈರಾಣುಗಳಂತೆ ಚಿಕಿತ್ಸೆಗೆ ಬಗ್ಗಬಹುದು. ಇದನ್ನೆಲ್ಲ ನಾವು ಜಗತ್ತಿನ ಇತಿಹಾಸದಿಂದ ತಿಳಿಯಬಹುದಾಗಿದೆ. ಆದರೆ ಇಂಥ ಡೆಡ್ಲಿ ವೈರಾಣು ಲೋಕದ ಸಮಸ್ತವನ್ನೂ ಅಲ್ಲಾಡಿಸುತಿರುವ ಪರಿ ಮಾತ್ರ ಭೀಕರ! ನಮ್ಮ ಪುರಾಣದಲ್ಲಿ ಬರುವ ರಕ್ತ ಬೀಜಾಸುರನ ಕತೆಯಂತೆಯೇ!!
ಆದರೆ ನಮ್ಮ ಅಲೋಚನಾ ಕ್ರಮ ಮತ್ತು ಜೀವನಶೈಲಿಗಳು ಬದಲಾಗದೇ ಇದ್ದರೆ ‘ಇಂಥ ಅಪಾಯ’ ಮುಂದೊಂದು ದಿನ ಖಂಡಿತ ಮನುಕುಲ ಮಾತ್ರವಲ್ಲ ಸಕಲ ಜೀವಿಗಳನೂ ಆಪೋಶನ ತೆಗೆದುಕೊಳ್ಳುವ ‘ಸದ್ದಿಲ್ಲದ ಪ್ರಳಯ’ವಾಗುವುದರಲ್ಲಿ ಸಂಶಯ ಕಾಣುತ್ತಿಲ್ಲ. ಪ್ರಕೃತಿಯು ಆಗಾಗ ಎಚ್ಚರಿಕೆಯ ಗಂಟೆಯನು ಬಾರಿಸುತ್ತಲೇ ಇರುತ್ತದೆ; ನಾವು ಮಾತ್ರ ಎಂದಿನಂತೆ ಕೇಳಿಸಿದರೂ ಕೇಳಿಸದ ಹಾಗೆ ಜಾಣಗಿವುಡರಾಗಿ ಬದುಕುತ್ತಲೇ ಇರುತ್ತೇವೆ. ಏನಾದರಿರಲಿ: ಪಾಠ ಕಲಿಯೋಣ ಮತ್ತು ‘ಅರಿ’ಯನ್ನು ಅರಿತು ಬಾಳೋಣ. ಲೋಕಾ ಸಮಸ್ತಾ ಸುಖಿನೋಭವಂತು.
-ಡಾ. ಹೆಚ್ ಎನ್ ಮಂಜುರಾಜ್, ಮೈಸೂರು, ವಿಚಾರಪ್ರಜ್ಞೆ ಪಾಕ್ಷಿಕ ಪತ್ರಿಕೆಯಲ್ಲಿ ಪ್ರಕಟವಾದ ನನ್ನ ಲೇಖನ